ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

ನಿರುದ್ಯೋಗಿ ಪದವಿಧರರಿಗೆ ಗುಡ್ ನ್ಯೂಸ್ : 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಸಚಿವ ಸಂಪುಟ ಅನುಮೋದನೆ | ,

July 30, 2026 11:10 AM
---Advertisement---

ಬೆಂಗಳೂರು, ಜುಲೈ 21 : ನಿರುದ್ಯೋಗಿ ಪದವಿಧರ ಯುವಕ- ಯುವತಿಯರಿಗೆ ರಾಜ್ಯ ಸರಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಬರೋಬ್ಬರಿ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ನಿರುದ್ಯೋಗಿ ಯುವಕ ಯುವತಿಯರಿಗೆ ಹೊಸ ಆಶಾಕಿರಣ ಮೂಡಿಸಿದೆ.

ಸಚಿವ ಸಂಪುಟ ಸಭೆಯ ನಂತರ ಸ್ವತಃ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಈ ವಿಚಾರ ತಿಳಿಸಿದ್ದಾರೆ. 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಶುರು ಆಗಲಿದೆ ಎಂದು ಸಿಎಂ ತಿಳಿಸಿದ್ದಾರೆ.

ನಿರುದ್ಯೋಗಿ ಪದವಿಧರರಿಗೆ ಗುಡ್ ನ್ಯೂಸ್ : 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಸಚಿವ ಸಂಪುಟ ಅನುಮೋದನೆ | cabinet approves appointment of 15 thousand teachers

ಸಂಪುಟ ಸಭೆಯ ಇತರ ಮಹತ್ವದ ನಿರ್ಣಯಗಳೇನು ?

ಬರ ಪರಿಸ್ಥಿತಿ ಕುರಿತ ಜಿಲ್ಲಾಧಿಕಾರಿ ಹಾಗೂ ಸಿಇಒ ಸಭೆಯ ಹಾಗೂ ವಿಶೇಷ ಸಚಿವ ಸಂಪುಟಸಭೆಯ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಿಎಂ ಮಾತನಾಡಿದರು.

Read this also : ಲಂಚಕ್ಕೆ ಚಪ್ಪಲಿ ಬೇಡಿಕೆ! ಲೋಕಾಯುಕ್ತ ಬಲೆಗೆ ಬಿದ್ದ ಎ.ಪಿ.ಪಿ

ಹವಾಮಾನ ವಿಶ್ಲೇಷಣೆ; ರೈತರಿಗೆ ಮಾಹಿತಿ ನೀಡುವ ವ್ಯವಸ್ಥೆಗೆ 36 ಕೋಟಿ

“ಕರ್ನಾಟಕ ಅಗ್ರಿಟೆಕ್‌ ಮಿಷನ್ 2026 ಅಡಿ ಸ್ಯಾಟಲೈಟ್ ಮೂಲಕ ಹವಾಮಾನ ವಿಶ್ಲೇಷಣೆ ನಡೆಸಿ ಅದರ ಮಾಹಿತಿಯನ್ನು ರೈತರಿಗೆ ಒದಗಿಸುವ ಕೆಲಸ ಮಾಡಲಾಗುವುದು. ಇದರ ಬಗ್ಗೆ ಸಮೀಕ್ಷೆಗೆ ಅಂದಾಜು 36 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಇಲಾಖೆಗೆ ಅನುಮೋದನೆ ನೀಡಲಾಗಿದೆ. ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳು, ರೋಗಭಾದೆ ಸೇರಿದಂತೆ ಅನೇಕ ಮಾಹಿತಿಗಳನ್ನು ಇದರ ಮೂಲಕ ನೀಡಲಾಗುವುದು” ಎಂದರು‌.

ಓಬಿಸಿ ಹಾಸ್ಟೆಲ್ ಗಳಿಗೆ ಹೊಸ ಹಾಸಿಗೆ ಮಂಚ; ಅಲೆಮಾರಿ ಜನಾಂಗದವರ ಮನೆಗೆ 10 ಲಕ್ಷ

“ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ 15 ಸಾವಿರ ಹಾಸಿಗೆ, 7.5 ಸಾವಿರ ಮಂಚಗಳನ್ನು ಖರೀದಿಸಲು 30 ಕೋಟಿ ರೂಪಾಯಿ ಆಡಳಿತಾತ್ಮಕ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಅಲೆಮಾರಿ ಜನಾಂಗದವರಿಗೆ ಸೂರು ಒದಗಿಸಲು ಹಣ ನೀಡಲಾಗುವುದು. 380 ಚದರ ಅಡಿ ವಿಸ್ತ್ರೀರ್ಣದ ಮನೆಗೆ 10 ಲಕ್ಷ ನೀಡಲಾಗುವುದು. ಅಗತ್ಯತೆ ಇರುವ ಕಡೆ ಈ ಯೋಜನೆ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ ” ಎಂದರು.

“ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿಗೆ ಅಗತ್ಯ ಉಪಕರಣಗಳ ಖರೀದಿಗೆ 16.56 ಕೋಟಿ ಅನುದಾನವನ್ನು ರಾಜ್ಯ ಬಜೆಟ್ ಹಾಗೂ 5 ಕೋಟಿಯನ್ನು ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹಿಸಿ 21.56 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನ ನೂತ‌ನ ಹಾಸ್ಟಲ್ ಕಟ್ಟಡ ನಿರ್ಮಾಣಕ್ಕೆ ಅಂದಾಜು 80 ಕೋಟಿ ಮೊತ್ತಕ್ಕೆ ಒಪ್ಪಿಗೆ ನೀಡಲಾಗಿದೆ. ಅದರ ದುರಸ್ತಿಗೆ 80 ಕೋಟಿ ಮೇಲೆ ಖರ್ಚಾಗಲಿತ್ತು. ನಾನು ಹೊಸ ಕಟ್ಟಡವನ್ನೇ ನಿರ್ಮಾಣ ಮಾಡಿ ಎಂದು ತಿಳಿಸಿದ್ದೇನೆ. ಕಾಲೇಜಿನ ಸುತ್ತಳತೆಯ 3-4 ಕಿಮೀನಲ್ಲಿ ಬೇರೆ ಸ್ಥಳ ಹುಡುಕಿ ಹಾಸ್ಟೆಲ್ ನಿರ್ಮಾಣಕ್ಕೆ ನೀಡಲಾಗುವುದು” ಎಂದರು‌.

“ಯಾನಗಂಟಿ, ನರಿಬೋಳ, ಗೊನ್ವಾರ, ಕಡಕೊಳ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ- 156 ಅಭಿವೃದ್ಧಿಗೆ 25 ಕೋಟಿ ರೂಪಾಯಿ ಮೊತ್ತದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ” ಎಂದರು.

“ಲೋಕಭವನದಲ್ಲಿ ಆಡಳಿತ ಭವನ ನಿರ್ಮಾಣಕ್ಕೆ ಅಂದಾಜು ವೆಚ್ಚ 27 ಕೋಟಿ ರೂಪಾಯಿಗೆ ಅನುಮತಿ ಹಾಗು ಐಐಟಿ ರಾಯಚೂರಿನಲ್ಲಿ ಎಐ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು 12 ಕೋಟಿ ರೂಪಾಯಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ” ಎಂದರು.

“180 ಕೋಟಿ ರೂಪಾಯಿ ವೆಚ್ಚದಲ್ಲಿ ಬೀದರ್ ನ ಕಾರಿಂಜ ಬಲದಂಡೆ ಕಾಲುವೆಯ ಅಭಿವೃದ್ಧಿ ಮಾಡಲಾಗುವುದು. ನಂಜಗೂಡಿನಿಂದ ಕಪಿಲಾ ನದಿಗೆ ಕೊಳಚೆ ನೀರು ಹೋಗುವುದನ್ನು ತಪ್ಪಿಸಲು ಹಾಗೂ ಪ್ರವಾಹ ಅಪಾಯ ತಗ್ಗಿಸಲು 70 ಕೋಟಿ ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ಯೋಜನೆ ಕೈಗೆತ್ತಿಕೊಳ್ಳಲಾಗುವುದು” ಎಂದರು.

ಕೆಪಿಎಸ್ ಇ ಅಧ್ಯಕ್ಷರ ಅಮಾನತಿಗೆ ಸಂಪುಟ ಒಪ್ಪಿಗೆ

“ಕೆಪಿಎಸ್ ಇ ಅಧ್ಯಕ್ಷರನ್ನು ರಾಜ್ಯಪಾಲರು ಅಮಾನತು ಮಾಡಿದ್ದರು. ಇದಕ್ಕೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ‌ನಾನು ಇದರ ಬಗ್ಗೆ ಕೂಲಂಕುಷವಾಗಿ ಅವಲೋಕಿಸಿದಾಗ ಅಮಾನತು ತೀರ್ಮಾನ ಸರಿಯಿದೆ ಎಂದು ಎನಿಸಿತು. ಅದಕ್ಕೆ ಒಪ್ಪಿಗೆ ನೀಡಲಾಗಿದೆ” ಎಂದರು.

ಸುಧಾಕರ್ ಅವರ ಕನಸಿನ ಯೋಜನೆಗೆ ಅನುಮೋದನೆ

“244 ಕೋಟಿ ರೂಪಾಯಿ ವೆಚ್ಚದಲ್ಲಿ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯ 114 ಕೆರೆಗಳು ಹಾಗೂ ಕುಡಿಯುವ ನೀರಿಗಾಗಿ ಗಾಯತ್ರಿ ಜಲಾಶಯವನ್ನು ತುಂಬಿಸಲಾಗುವುದು. ಇದು ದಿವಂಗತ ಸಚಿವರಾದ ಸುಧಾಕರ್ ಅವರ ಕನಸಿನ ಯೋಜನೆಯಾಗಿತ್ತು” ಎಂದರು.

ಆಗಸ್ಟ್ 20 ಕ್ಕೆ ಭಾರತ್ ಜೋಡೋ ಯುವಕ ಸಂಘಗಳ ಉದ್ಘಾಟನೆ ಆಗಲಿದೆಯೇ ಎಂದು ಕೇಳಿದಾಗ, “ನಮ್ಮ ಉಪಮುಖ್ಯಮಂತ್ರಿಯವರು ಇದಕ್ಕೆ ಬೇಕಾದ ಮಾರ್ಗದರ್ಶನಗಳನ್ನು ಅಂತಿಮಗೊಳಿಸಿದ್ದಾರೆ” ಎಂದರು.

ರೈತರ ಆತ್ಮಹತ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳ ಸಭೆಯಲ್ಲಿ ಮಾಹಿತಿ ನೀಡಿದ್ದರ ಬಗ್ಗೆ ಕೇಳಿದಾಗ, “ಒಂದೇ ಒಂದು ರೈತನ ಆತ್ಮಹತ್ಯೆಯಾಗಿದೆ ಎಂದು ಹೇಳಿದ್ದಾರೆ” ಎಂದರು.

ಗೃಹಲಕ್ಷ್ಮೀ ಯೋಜನೆಗೆ ಫೆಶಿಯಲ್ ಅಥೆಂಟಿಕೇಷನ್ ಅಳವಡಿಸುವ ಬಗ್ಗೆ ಕೇಳಿದಾಗ, “ಇದಕ್ಕೆ 20 ಕೋಟಿ ಹಣವನ್ನು ಮೀಸಲಿಡಲಾಗಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಗಳು ಹೇಗೆ ಕೆಲಸ‌ ಮಾಡಬೇಕು ಹಾಗೂ ಬಯೋ ಮೆಟ್ರಿಕ್ ಅನ್ನು ಹೇಗೆ ಬಳಸಬೇಕು ಎಂದು ತಿಳಿಸಲಾಗಿದೆ. ಬ್ಯಾಂಕ್ ಖಾತೆಗಳು, ದೂರವಾಣಿ ಸಂಖ್ಯೆ ಲಿಂಕ್ ಆಗಿರಬೇಕು ಎಂದು ಹೇಳಲಾಗಿದೆ. ಎಜಿಎ ವರದಿಗಳನ್ನು ಮಾಧ್ಯಮಗಳು ನೋಡಿವೆ. ನಮಗೆ ಯಾರನ್ನೂ ಈ ಯೋಜನೆಯಿಂದ ಕಿತ್ತು ಹಾಕಲು ಇಷ್ಟವಿಲ್ಲ‌. ಆದರೆ ಅನರ್ಹರಿಗೆ ಹಣ ತಲುಪಬಾರದು.‌ಅರ್ಹರಿಗೆ ತಲುಪಬೇಕು” ಎಂದರು.

ಮುಂಗಾರು ಅಧಿವೇಶನದ ಮುಂಚಿತವಾಗಿ ರಾಜ್ಯದ ಸಂಸದರ ಜೊತೆ ಸಭೆ ನಡೆಸಲಾಗುವುದೇ ಎಂದು ಕೇಳಿದಾಗ, “ನಮ್ಮ ರಾಜ್ಯಕ್ಕೆ ಏನೇನು ಯೋಜನೆಗಳು ಬೇಕು, ಅಧಿವೇಶನದಲ್ಲಿ ಸಂಸದರು ಏನು ಮಾತನಾಡಬೇಕು ಎಂದು ರಾಜ್ಯದ ಸಂಸದರ ಸಭೆ ನಡೆಸಲಾಗುತ್ತದೆ. ಇದಕ್ಕಾಗಿ ದೆಹಲಿಗೆ ಹೋಗಿ ಬರುತ್ತೇನೆ” ಎಂದರು.

ಕಾವೇರಿ ನೀರಿನ ವಿಚಾರವಾಗಿ ಕೇಳಿದಾಗ, “ಅವರೂ ಸಹ ರೆಜಲ್ಯೂಷನ್ ಮಾಡಿದ್ದಾರೆ. ನಾವು ನಮ್ಮ ಚಿಂತನೆ, ರಕ್ಷಣೆಯನ್ನು ಅವರಿಗೆ ತಿಳಿಸಬೇಕಲ್ಲವೇ?” ಎಂದರು.

ವಿಧಾನಸಭೆ ಅಧಿವೇಶನ ಯಾವಾಗ ಎಂದು ಕೇಳಿದಾಗ, “ಆಗಸ್ಟ್ ‌ಮೊದಲನೇ ವಾರ ಅಂದಾಜು 6 ನೇ ತಾರೀಕು ಪ್ರಾರಂಭ ಆಗಬಹುದು” ಎಂದರು.

ಅಧಿವೇಶನಕ್ಕೆ ಮುಂಚಿತವಾಗಿ ಸಚಿವ ಸಂಪುಟ ವಿಸ್ತರಣೆ ಆಗಲಿದೆಯೇ ಎಂದಾಗ, “ಖಂಡಿತವಾಗಿ ಈ ವಾರದಲ್ಲಿಯೇ ಆಗಲಿದೆ” ಎಂದರು.

ಮತ್ತೆ ದೆಹಲಿಗೆ ಹೋಗುವಿರಾ ಎಂದಾಗ, “ಅವಶ್ಯಕತೆ ಬಿದ್ದರೆ ದಿನಾ ಹೋಗಿ ಬರುತ್ತೇನೆ” ಎಂದರು.

ಮುಂದಿನ ವಾರ ರಾಹುಲ್ ಗಾಂಧಿ ಅವರ ಆಗಮನದ ಬಗ್ಗೆ ಕೇಳಿದಾಗ, “ಇನ್ನೂ ದಿನಾಂಕ ನಿಗದಿಯಾಬೇಕು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಹಾಗೂ ನೂತನ ಕಾಂಗ್ರೆಸ್ ಕಚೇರಿಯ ಭೂಮಿ ಪೂಜೆಗೆ ಆಗಮಿಸಲಿದ್ದಾರೆ” ಎಂದು ವಿಶೇಷ ಸಚಿವ ಸಂಪುಟಸಭೆಯ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಸಿಎಂ ತಿಳಿಸಿದ್ದಾರೆ.

WhatsApp

Join Now

Telegram

Join Now

Leave a Comment