30 children are sick after eating Avalakki in Morarji school | ಮೊರಾರ್ಜಿ ಶಾಲೆಯಲ್ಲಿ ಅವಲಕ್ಕಿ ತಿಂದು 30 ಮಕ್ಕಳು ಅಸ್ವಸ್ಥ | ಕಲಬುರಗಿ ಜು.30 : ಬೆಳಿಗ್ಗೆ ಟಿಫನ್ ಮಾಡಿರುವ 30 ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಭವಿಸಿದೆ.
ಅಸ್ವಸ್ಥಗೊಂಡ ಮಕ್ಕಳನ್ನು ಕೂಡಲೇ ಅಫಜಲಪುರ ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಮೂವತ್ತು ಮಕ್ಕಳ ಪೈಕಿ ಇಬ್ಬರು ತೀವ್ರ ಅಸ್ವಸ್ಥಗೊಂಡ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಟಿಫನ್ ಮುಗಿಸಿ ಶಾಲೆಗೆ ಹೋಗಬೆಕೆನ್ನುವಷ್ಟರಲ್ಲಿ ಹೊಟ್ಟೆನೋವು ಶುರು

ಮಕ್ಕಳು ಮುಂಜಾನೆ ಟಿಫಿನ್ ಮಾಡಿ ಶಾಲೆಗೆ ಹೋಗಬೇಕು ಅಂತ ತಯಾರಾಗಿದ್ರು. ಇನ್ನೇನು ಉಪಹಾರ ಸೇವಿಸಿ ಶಾಲೆಗೆ ಹೋಗಬೇಕು ಎನ್ನುವಷ್ಟರಲ್ಲಿ ಹೊಟ್ಟೆ ನೋವು ಶುರುವಾಗಿದೆ. ಕೂಡಲೇ ಈ ಮಕ್ಕಳನ್ನು ಅಫಜಲಪುರ ತಾಲೂಕಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
30 children are sick after eating Avalakki in Morarji school | ಅವಲಕ್ಕಿ ಅವಾಂತರ
ಈ ಫೋಟೋದಲ್ಲಿರುವ ಮಕ್ಕಳೆಲ್ಲಾ ಕರಜಗಿ ಗ್ರಾಮದಲ್ಲಿರೋ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿರುವವರು. ಸುಮಾರು 30 ಕ್ಕೂ ಹೆಚ್ಚು ಮಕ್ಕಳು ಬೆಳಿಗ್ಗೆ ಉಪಹಾರ ಸೇವನೆ ಮಾಡಿದ್ದಾರೆ. ವಸತಿ ನಿಲಯದಲ್ಲಿ ಅವಲಕ್ಕಿ ಸೇವನೆ ಮಾಡಿದ ನಂತರ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಶುರುವಾಗಿದೆ. ಉಪಹಾರ ಸೇವಿಸಿದ ಕೆಲ ಹೊತ್ತಿನಲ್ಲಿ ಮಕ್ಕಳಿಗೆ ತಲೆ ನೋವು, ಹೊಟ್ಟೆ ನೋವು ಕಾಣಿಸಿದೆ. ಹೀಗಾಗಿ ಕೂಡಲೇ ಅವರನ್ನು ಅಫಜಲಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊರಾರ್ಜಿ ಶಾಲೆಯಲ್ಲಿ ಅವಲಕ್ಕಿ ತಿಂದು 30 ಮಕ್ಕಳು ಅಸ್ವಸ್ಥ | 30 ರಲ್ಲಿ ಇಬ್ಬರು ತೀವ್ರ ಅಸ್ವಸ್ಥ
ಅವಲಕ್ಕಿ ಸೇವಿಸಿ ಅಸ್ವಸ್ಥಗೊಂಡ 30 ಮಕ್ಕಳ ಪೈಕಿ ಇಬ್ಬರು ಮಕ್ಕಳು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆ ಇಬ್ಬರು ಮಕ್ಕಳನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಸವರಾಜ, ಕಾರ್ತಿಕ್ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ಕಲಬುರಗಿ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಇಬ್ಬರು ಮಕ್ಕಳೂ ಸೇರಿ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ಆತಂಕ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
Read more : ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! 2026ರ ಶೈಕ್ಷಣಿಕ ಸಾಲಕ್ಕೆ ಅರ್ಜಿ ಆರಂಭ appplication invitation for scholarship 2026
ಆಸ್ಪತ್ರೆಯತ್ತ ಪಾಲಕರ ದೌಡು
ಕರಜಗಿ ಗ್ರಾಮದಲ್ಲಿರೋ ಮೊರಾರ್ಜಿ ದೇಸಾಯಿ ವಸತಿ ನೀಲಯಕ್ಕೆ ಅಫಜಲಪುರ ತಾಲೂಕು ಸೇರಿದಂತೆ ವಿವಿಧ ಕಡೆಯಿಂದ ಅಭ್ಯಾಸ ಮಾಡಲು ಮಕ್ಕಳು ಬರುತ್ತಾರೆ. ಆದರೆ ಬೆಳಿಗ್ಗೆ ಉಪಹಾರ ಸೇವನೆ ಮಾಡಿರೋ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಹಳ್ಳಿಗಳಲ್ಲಿ ಇರುವ ಪಾಲಕರಿಗೆ ವಿಷಯ ಗೊತ್ತಾಗಿ ತೀವ್ರ ಆತಂಕಪಡುವಂತಾಯಿತು. ಹಲವು ಪಾಲಕರು ವಿಷಯ ಗೊತ್ತಾಗುತ್ತಿದ್ದಂತೆಯೇ ಗಾಭರಿಯಿಂದ ಅಫಜಲಪುರ ತಾಲೂಕಾ ಆಸ್ಪತ್ರೆಯತ್ತ ಧಾವಿಸಿ ಬರುತ್ತಿದ್ದುದು ಕಂಡು ಬಂತು.
ಪಾಲಕರ ಆಕ್ರೋಶ ರಸ್ತೆ ತಡೆ
ಇನ್ನೂ ಮೊರಾರ್ಜಿ ಶಾಲೆಯ ವಸತಿ ನಿಲಯದ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಹಿನ್ನೆಲೆ ಪಾಲಕರ ಆಕ್ರೋಶ ಸಹ ಭುಗಿಲೇಳುವಂತಾಯಿತು. ಪಾಲಕರು ಅಫಜಲಪುರ ದಲ್ಲಿ ರಸ್ತೆ ತಡೆ ಚಳುವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಾಸ್ಟೇಲ್ ಅವ್ಯವಸ್ಥೆಯಿಂದ ನಮ್ಮ ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಇದಕ್ಕೆಲ್ಲಾ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಿರತ ಪಾಲಕರು ಆಗ್ರಹಿಸಿದರು.
ಟಯರ್ ಗೆ ಬೆಂಕಿ
ಅಫಜಲಪುರ ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪಾಲಕರು, ರಸ್ತೆ ಮೇಲೆ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಪಾಲಕರ ಪ್ರತಿಭಟನೆಗೆ ಮೊರಾರ್ಜಿ ವಸತಿ ಶಾಲೆಯ ಇನ್ನುಳಿದ ಮಕ್ಕಳು ಸಹ ಬೆಂಬಲಿಸಿ ರಸ್ತೆ ತಡೆಯಲ್ಲಿ ಭಾಗಿಯಾಗಿ ಗಮನ ಸೆಳೆದರು.
ಶಾಸಕ ಎಂ.ವೈ ಪಾಟೀಲ್ ಭೇಟಿ

ಇನ್ನೂ ಫುಡ್ ಪಾಯಿಸನ್ ವಿಚಾರ ತಿಳಿದ ತಕ್ಷಣ ಅಫಜಲಪುರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ M.Y ಪಾಟೀಲ್, ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ಶಾಸಕ ಎಂ.ವೈ ಪಾಟೀಲ್ ಭರವಸೆ ನೀಡಿದರು.
ಕಳಪೆ ಆಹಾರ ನೀಡಿದವರ ವಿರುದ್ದ ಕ್ರಮ ಆಗಲಿ
ಇನ್ನೂ ಕರಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ನೀಲಯದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಸಹ ಉಪಾಹಾರದಿಂದ ಈ ಘಟನೆ ಆಗಿದೆ ಎಂದಿದ್ದಾರೆ. ಹಾಗಾದ್ರೆ ತುಂಬಾ ಓಲ್ಡ್ ಸ್ಟಾಕ್ ಅವಲಕ್ಕಿ ಬಳಕೆ ಮಾಡಿದ್ರಾ ? ಅಥವಾ ಆಹಾರದಲ್ಲಿ ಮತ್ತೇನಾದ್ರೂ ಮಿಶ್ರಣ ಆಗಿದೆಯಾ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅದೇನೆ ಇರಲಿ ವಸತಿ ನೀಲಯದಲ್ಲಿ ಗುಣಮಟ್ಟದ ಆಹಾರ ನೀಡಬೇಕೆಂದು ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ನೀಡುತ್ತಿದ್ರು ವಸತಿ ನಿಲಯದಲ್ಲಿ ಮಾತ್ರ ಕಳಪೆ ಆಹಾರ ನೀಡುತ್ತಿದ್ದಾರೆ. ಕೂಡಲೇ ಇಂತವರ ಮೇಲೆ ಕ್ರಮ ಕೈಗೊಂಡು ಗುಣಮಟ್ಟದ ಆಹಾರ ಮಕ್ಕಳಿಗೆ ನೀಡುವ ಕೆಲಸವಾಗಬೇಕಿದೆ.





