About Us

ಮೊದಲ ಮಾತು..

ನನ್ನ ಗುರಿ ಮತ್ತು ದಾರಿ ಅಚಲ..
ಅದುವೇ ಧರ್ಮದ ದಾರಿ…

ಆತ್ಮೀಯ ಓದುಗರೇ, ಕರ್ನಾಟಕ ಪತ್ರಿಕೋದ್ಯಮದಲ್ಲಿ ಸ್ಥಳಿಯ ಪತ್ರಿಕೆಗೇನೂ ಕೊರತೆಯಿಲ್ಲ. ಸ್ಥಳಿಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮಹತ್ವದ ಕಾರ್ಯದಲ್ಲಿ ಈಗಾಗಲೇ ರಾಜ್ಯದಲ್ಲಿ ಹಾಗೂ ನನ್ನೂರು ಕಲಬುರಗಿಯಲ್ಲಿ ಹಲವಾರು ಪತ್ರಿಕೆಗಳು ತೊಡಗಿಸಿಕೊಂಡಿವೆ. ಪತ್ರಿಕೋದ್ಯಮದ ಬಗ್ಗೆ ನನಗೇನೋ ಅಪಾರ ಸೆಳೆತ, ತುಡಿತ ಮೊದಲಿನಿಂದಲೂ ಇದೆ. ಇದೇ ಸೆಳೆತ, ತುಡಿತ ನನ್ನನ್ನೀಗ ಪತ್ರಿಕೆ ಆರಂಭಿಸುವ ಹಂತಕ್ಕೆ ತಂದು ನಿಲ್ಲಿಸಿದೆ. ಇದರಿಂದ ಹಣ ಮಾಡುವ ಉದ್ದೇಶವೂ ಇಲ್ಲ. ಸಮಾಜದ ಎಲ್ಲಾ ಸಮಸ್ಯೆ, ಅಂಕು ಡೊಂಕುಗಳನ್ನು ಸರಿಪಡಿಸುವೆ ಎನ್ನುವ ಹೊಂಬತನವೂ ನನ್ನಲ್ಲಿ ಇಲ್ಲ. ಕಂಡದ್ದು ತೋರಿಸುವ, ತೋಚಿದ್ದು ಗೀಚಿ ನಿಮ್ಮ ಮುಂದಿಡುವ ಪುಟ್ಟ ಪ್ರಯತ್ನ ನಮ್ನದು. ನಿಮ್ಮ‌ಹಾರೈಕೆ, ಪ್ರೀತಿ ಇದ್ದರೆ ಈ ಹೊಸ ಹಾದಿ ನಮಗೇ ಕಷ್ಟವೇನಲ್ಲ. ಬಂದಿದ್ದು ಬರಲಿ, ನನ್ನ ಗುರಿ ಮತ್ತು ದಾರಿ ಒಂದೇ.. ಅದು “ಧರ್ಮದ ದಾರಿ”. ಎಂತಹ ಕಷ್ಟವೇ ಬರಲಿ, ಈ ಧರ್ಮದ ದಾರಿ ಮಾತ್ರ ಬಿಡೇನು.. ನನ್ನಾಣೆ..‌!!

ಸಂವಿಧಾನವೇ ಧರ್ಮ !!

ಸತ್ಯ, ನ್ಯಾಯ, ನಿಷ್ಟೇ, ಪ್ರಾಮಾಣಿಕತೆಯಿಂದ ನಡೆಯುವುದೇ ಧರ್ಮ ಎಂದು ನಂಬಿರುವವರು ನಾವು. ನಮ್ಮ ಪಾಲಿಗೆ, ಸಮಸ್ತ ಭಾರತೀಯರು ಆರಾಧಿಸುವ, ಅನುಸರಿಸುವ ಸಂವಿಧಾನವೇ ನಮ್ಮ‌ ಶ್ರೇಷ್ಠ ಧರ್ಮ.‌ ಕಷ್ಟದಲ್ಲಿದ್ದವರನ್ನು ಕೈ ಹಿಡಿದು ಮೇಲೆತ್ತುವುದೇ ಪರಮ ಧರ್ಮ. ಹಾಗಾಗಿಯೇ ಧರ್ಮದ ದಾರಿಯಲ್ಲಿ ಸಾಗುವ ಸಂಕಲ್ಪ ಮಾಡಿದ್ದೇವೆ. ಈ ದಾರಿಯಲ್ಲಿ ನೀವೂ ನಮ್ಮ ಜೊತೆಗೂಡಿ. ನಿಮ್ಮ ಪ್ರೀತಿ, ಹಾರೈಕೆ, ಬೆಂಬಲ ನಮ‌್ಮ ಜೊತೆಗಿದ್ದರಾಯ್ತು. ಗೆಲುವು ನಮ್ಮದೇ ಎರಡು ಮಾತೇ ಇಲ್ಲ.

ಇದು ಹೊಸ ದಾರಿಯಲ್ಲ…

ಈ ಧರ್ಮದ ದಾರಿ ನಮಗೇನೂ ಹೊಸ ಲೋಕವಲ್ಲ. ಕಳದ 25 ವರ್ಷಗಳಿಂದ ಇದೇ ದಾರಿಯಲ್ಲಿ ಸಾಗಿ ಬಂದವರು ನಾವು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಮಾಡಿದ್ದೇವೆ. ವಕೀಲ ವೃತ್ತಿಯೂ ಇದರಲ್ಲಿ ಪ್ರಮುಖ. ಅಷ್ಟೇ ಅಲ್ಲ, ಮಾಧ್ಯಮ ರಂಗದ ಅನುಭವವೂ ಇದರಲ್ಲಿ ಸಿಂಹ ಪಾಲಿದೆ. ವೃತ್ತಿಯೊಂದಿಗೆ ಪ್ರವೃತ್ತಿ ಎನ್ನುವಂತೆ ನನ್ನ ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಈ ಇದನ್ನು ಸ್ವೀಕರಿಸಿ ಮುನ್ನಡೆಸುವ ಸಂಕಲ್ಪ ತೊಟ್ಟಿದ್ದೇವೆ. ಇದಕ್ಕೆ ಅನೇಕ ಹಿರಿಯರು ನಮಗೆ ಬೆನ್ನು ತಟ್ಟಿ ಆಶೀರ್ವದಿಸಿದ್ದಾರೆ. ಅದೇ ಹುಮ್ಮಸ್ಸಿನಲ್ಲಿ ಮುಂದೆ ಹೆಜ್ಜೆ ಇಟ್ಟಿದ್ದೇವೆ. ಮತ್ತೊಮ್ಮೆ ಮಗದೊಮ್ಮೆ ಹೇಳುವೆ ನಮ‌್ಮ ಗುರಿ ಮತ್ತು ದಾರಿ ಅಚಲ. ಅದುವೇ ಧರ್ಮದ ದಾರಿ…

  • ಸಂಪಾದಕ‌