School teacher sentenced to 25 years jail in POCSO case | ಕಲಬುರಗಿ ಆ.10:- ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಶಿಕ್ಷಕನಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ 25 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣ ನಡೆದಿದ್ದು ಯಾವ ಶಾಲೆಯಲ್ಲಿ ? ಪ್ರಕರಣದ ಹಿನ್ನಲೆ ಏನು ? ಎನ್ನುವುದಕ್ಕೆ ಈ ಸ್ಟೋರಿ ಓದಿ.
ಶಾಲಾ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಪ್ರಕರಣವೊಂದರಲ್ಲಿ ಕಲಬುರಗಿ ಜಿಲ್ಲಾ ನ್ಯಾಯಾಲಯ ಆರೋಪಿ ಶಿಕ್ಷಕನ ವಿರುದ್ದ 25 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಯಡ್ರಾಮಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ
ಕಲಬುರಗಿ ಜಿಲ್ಲೆ ಯಡ್ರಾಮಿ ಪಟ್ಟಣದಲ್ಲಿ ಕಳೆದ 29-11-2024 ರಲ್ಲಿ ಈ ಅತ್ಯಾಚಾರ ಪ್ರಕರಣ ಸಂಭವಿಸಿತ್ತು. ಯಡ್ರಾಮಿ ಪಟ್ಟಣದಲ್ಲಿ ಖಾಸಗಿ ನವೋದಯ ಕಿರಿಯ ಪ್ರಾಥಮಿಕ ಶಾಲೆ ಇದೆ. ಈ ಶಾಲೆಯ ಕಾರ್ಯದರ್ಶಿ ಹಾಜಿಮಲಂಗ ಎನ್ನುವಾತ ಇಲ್ಲಿ ಶಿಕ್ಷಕನಾಗಿಯೂ ಕೆಲಸ ಮಾಡುತ್ತಿದ್ದ. 2024 ರಲ್ಲಿ ಈ ಹಾಜಿ ಮಲಂಗ ಅದೇ ಶಾಲೆಯಲ್ಲಿ ವಾಸ ಇರುತ್ತಿದ್ದ ಶಾಲಾ ಮಕ್ಕಳ ಜೊತೆಗೆ ಸಲುಗೆಯಿಂದ ಮಾತನಾಡುವುದು, ಮೈ ಮುಟ್ಟುವುದು ಸೇರಿದಂತೆ ಅಸಭ್ಯವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದ.
ಹಲವು ಬಾರಿ ಅತ್ಯಾಚಾರ
ಅದೇ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿರುವ 11 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಈ ಕಾಮುಕ ಶಿಕ್ಷಕ ಹಾಜಿಮಲಂಗ ಹಲವು ಬಾರಿ ಅತ್ಯಾಚಾರ ಮಾಡಿದ್ದ. ಬಾಲಕಿಗೆ ರಾತ್ರಿ ಹೊತ್ತು ಕೋಣೆಗೆ ಕರೆದು ಅತ್ಯಾಚಾರ ಮಾಡುತ್ತಿದ್ದ. ವಿಚಾರ ಯಾರಿಗಾದರೂ ಹೇಳಿದರೆ ಫೇಲ್ ಮಾಡುತ್ತೇನೆ. ಕೊಲೆ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದ. ಹಾಗಾಗಿ ಬಾಲಕಿ ನೋವು ತಾಳಿಕೊಂಡು ಸುಮ್ಮನಿದ್ದಳು.
ಆದ್ರೆ ಈ ಬಾಲಕಿಯನ್ನು ಆತ ರಾತ್ರಿ ರೂಮಿಗೆ ಕರೆದೊಯ್ಯುತ್ತಿದ್ದ ವಿಚಾರ ಇತರೇ ವಿದ್ಯಾರ್ಥಿನಿಯರು ಗಮನಿಸಿದ್ದರು. 29-11-24 ರಂದು ಮತ್ತೆ ಶಾಲಾ ಕೋಣೆಯಲ್ಲಿ ಮಲಗಿದ್ದ ಅದೇ ವಿದ್ಯಾರ್ಥಿನಿಯನ್ನು ಎಬ್ಬಿಸಿಕೊಂಡು ಸ್ಟಾಪ ರೂಮಗೆ ಕರೆದುಕೊಂಡು ಹೋಗಿ ಆ ದಿನವೂ ಬಲವಂತವಾಗಿ ಅತ್ಯಾಚಾರ ಮಾಡಿದ್ದ. ಆತನ ಬೆದರಿಕೆಗೆ ಹೆದರಿ ಆ ಬಾಲಕಿ ವಿಚಾರ ಹೆತ್ತವರ ಮುಂದೆ ಹೇಳಿರಲಿಲ್ಲ.
ಸಾಕ್ಷಿ ಹೇಳಿದ ರಕ್ತದ ಕಲೆ
ಈ ಕಾಮುಕ ಶಿಕ್ಷಕ, ಆ ಬಾಲಕಿಯನ್ನು ಮತ್ತೊಂದು ದಿನ ರಾತ್ರಿ ಕೋಣೆಗೆ ಕರೆದೊಯ್ಯುತ್ತಿರುವುದನ್ನೂ ಸಹ ಇತರೇ ವಿದ್ಯಾರ್ಥಿನಿಯರು ನೋಡಿರುತ್ತಾರೆ. ಅಲ್ಲದೇ ಆ ಸ್ಥಳದಲ್ಲಿ ರಕ್ತ ಬಿದ್ದಿರುವುದನ್ನು ಕಂಡು ಇತರೇ ವಿದ್ಯಾರ್ಥಿನಿಯರು ಶಿಕ್ಷಕ ಹಾಜಿ ಮಲಂಗೆ ಈ ವಿಚಾರ ಪ್ರಶ್ನಿಸುತ್ತಾರೆ. ಆಗ ಆ ಶಿಕ್ಷಕ ಟೊಮಾಟೋ ಸಾರು ಚೆಲ್ಲಿದೆ ಅಂತ ಹೇಳಿ ಆ ರಕ್ತವನ್ನು ಹಾಸಿಗೆಯಿಂದ ಒರೆಸಿ ಆ ಹಾಸಿಗೆಯನ್ನು ಯಡ್ರಾಮಿ ಹೊರವಲಯದ ಕೆನಾಲ್ ನಲ್ಲಿ ಬಿಸಾಕಿ ಸಾಕ್ಷಿ ನಾಶ ಮಾಡಿದ್ದ.
ಸಹ ಶಿಕ್ಷಕಿಯ ಸಮಯ ಪ್ರಜ್ಞೆ
ಮಕ್ಕಳಿಂದ ಮಕ್ಕಳಿಗೆ ಈ ಕಾಮುಕ ಶಿಕ್ಷಕನ ವಿಚಾರ ಹರಡಿದ ನಂತರ ಆ ನೊಂದ ಬಾಲಕಿ ಅದೇ ಶಾಲೆಯ ಶಿಕ್ಷಕಿಯೊಬ್ಬರ ಮುಂದೆ ಈ ವಿಚಾರ ಬಹಿರಂಗಪಡಿಸುತ್ತಾಳೆ. ನಂತರ ವಿಚಾರ ಗ್ರಾಮದ ತುಂಬಾ ಹರಡಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತದೆ. ಸಾಕಷ್ಟು ಹೋರಾಟಗಳು ನಡೆದು ಶಿಕ್ಷಕ ಹಾಜಿಮಲಂಗನ ವಿರುದ್ದ ಆಕ್ರೋಶ ತೀವ್ರಗೊಳ್ಳುತ್ತದೆ.
ದೂರು ದಾಖಲಾಗುತ್ತಿದ್ದಂತೆಯೇ ತನಿಖೆ ಚುರುಕು
ಖಾಸಗಿ ಶಾಲಾ ಕಾರ್ಯದರ್ಶಿ ವಿರುದ್ದ ಕೇಳಿ ಬಂದ ಈ ದೂರಿನ ಬಗ್ಗೆ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಪೊಲೀಸ್ ತನಿಖೆ ಚುರುಕುಗೊಳ್ಳುತ್ತದೆ.
DYSP ಶಂಕರಗೌಡ ಪಾಟೀಲ್ & IPS ಅಧಿಕಾರಿ ಬಿಂದು ಮಣಿ ತನಿಖಾಧಿಕಾರಿಯಾಗಿ ನೇಮಕ
ಈ ಪ್ರಕರಣದ ತನಿಖೆಗಾಗಿ ಕಲಬುರಗಿ ಎಸ್ಪಿ ಅವರು ಸ್ಪೇಷಲ್ ಟೀಂ ರಚನೆ ಮಾಡುತ್ತಾರೆ. ಶಹಾಬಾದ ಉಪವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮತ್ತು ಅಂದಿನ ಗ್ರಾಮೀಣ ಎಎಸ್ಪಿ, IPS ಅಧಿಕಾರಿ ಬಿಂದು ಮಣಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿತ್ತು.
ಈ ಇಬ್ಬರು ತನಿಖಾಧಿಕಾರಿಗಳು, ಈ ಅಮಾಯಕ ಹಾಗೂ ಮುಗ್ದ ಅಪ್ರಾಪ್ತ ಬಾಲಕಿಯ ಮೇಲಿನ ದೌರ್ಜನ್ಯ ಪ್ರಕರಣದ ಪೋಕ್ಸೋ ಕಾಯ್ದೆ ಅಡಿಯ ದೂರಿನ ಸಮಗ್ರ ತನಿಖೆ ನಡೆಸಿ ಚಾರ್ಜಶೀಟ್ ಸಲ್ಲಿಸುತ್ತಾರೆ.
ನ್ಯಾಯಾಲಯದಲ್ಲಿ ತುಪ್ಪದ್ ವಾದ

ಮುಂದೆ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಶುರುವಾದ ನಂತರ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ್ ಅವರು ಸರಕಾರದ ಪರವಾಗಿ ನೊಂದ ಬಾಲಕಿಗೆ ನ್ಯಾಯ ಕೊಡಿಸಲು ಸಮರ್ಥವಾಗಿ ವಾದ ಮಂಡಿಸುತ್ತಾರೆ.
School teacher sentenced to 25 years jail in POCSO case
ವಿಚಾರಣೆಯ ನಂತರ ಶಿಕ್ಷಕ ಹಾಜಿಮಲಂಗನ ಅಪರಾಧ ಸಾಬಿತಾಗಿದ್ದು, ನ್ಯಾಯಾಲಯ 25 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ. ದಂಡ ಕೊಡಲು ತಪ್ಪಿದಲ್ಲಿ ಮತ್ತೆ ಆರು ತಿಂಗಳು ಸಾದಾ ಶಿಕ್ಷೆ ವಿಧಿಸಿದ್ದಾರೆ. ಕಲಬುರಗಿ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾದೀಶರಾದ ನ್ಯಾಯಮೂರ್ತಿ ಎಸ್.ಎಲ್ ಚವ್ಹಾಣ ಅವರು ಆರೋಪಿ ಶಿಕ್ಷಕ ಹಾಜಿಮಲಂಗಗೆ ಶಿಕ್ಷೆ ವಿಧಿಸಿ ಆಗಷ್ಟ 10 ರಂದು ಮಹತ್ವದ ತೀರ್ಪು ನೀಡಿದ್ದಾರೆ.

ತನಿಖಾಧಿಕಾರಿಗಳ ಪಾತ್ರ ಪ್ರಮುಖ
ಈ ಪ್ರಕರಣದಲ್ಲಿ ತಪ್ಪಿತಸ್ಥ ಕಾಮುಕ ಶಿಕ್ಷಕ ಹಾಜಿಮಲಂಗನಿಗೆ ಶಿಕ್ಷೆಯಾಗುವಂತೆ ಮಾಡಿ ನ್ಯಾಯ ಗೆಲ್ಲಲು ಕಾರಣವಾಗಿದ್ದು ಈ ಪೋಕ್ಸೋ ಪ್ರಕರಣದ ತನಿಖಾಧಿಕಾರಿಗಳಾದ ಶಹಾಬಾದ ಉಪವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮತ್ತು ಇಂದಿನ ಕೊಡುಗು ಜಿಲ್ಲಾ ಎಸ್ಪಿ ಆಗಿರುವ ಹಾಗೂ ಅಂದಿನ ಕಲಬುರಗಿ ಗ್ರಾಮೀಣ ASP ಆಗಿದ್ದ ಬಿಂದುರಾಣಿ ಅವರ ಪಾತ್ರ ಪ್ರಮುಖವಾಗಿದೆ.
ಎಸ್ಪಿಯಿಂದ ಅಭಿನಂದನೆ, ಸತ್ಕಾರ
ಈ ಪ್ರಕರಣದಲ್ಲಿ ಸರಕಾರದ ಪರ ವಾದ ಮಂಡಿಸಿದ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ ಅವರಿಗೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ತಮ್ಮ ಕಛೇರಿಯಲ್ಲಿ ಶಾಲು ಹೊದಿಸಿ ಸತ್ಕರಿಸಿ ಅಭಿನಂದಿಸಿದರು.
ತನಿಖಾಧಿಕಾರಿ ಶಂಕರಗೌಡ ಪಾಟೀಲ್ ಕಾರ್ಯಕ್ಕೆ ಎಸ್ಪಿ ಪ್ರಶಂಸೆ

ಅಲ್ಲದೇ ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ಸೂಕ್ಷ್ಮ ಸಾಕ್ಷಾಧಾರಗಳನ್ನು ಕಲೆ ಹಾಕಿ ಸಮರ್ಪಕವಾಗಿ ಚಾರ್ಜ್ ಶಿಟ್ ಸಲ್ಲಿಸಿ ಅಪರಾಧಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದೇ ಇರುವಂತೆ ಮಾಡಿದ್ದೇ ಕಲಬುರಗಿ ಜಿಲ್ಲೆಯ ದಿಟ್ಟ, ಪ್ರಾಮಾಣಿಕ , ನ್ಯಾಯಯುತ ಅಧಿಕಾರಿ ಶಂಕರಗೌಡ ಪಾಟೀಲ್ ಅವರ ನಿಷ್ಪಕ್ಷಪಾತ ತನಿಖೆ. ಹಾಗಾಗಿ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ತನಿಖಾಧಿಕಾರಿ ಶಂಕರಗೌಡ ಪಾಟೀಲ್ ಅವರಿಗೂ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಗೋಮುಖ ವ್ಯಾಘ್ರಗಳಿಗೆ ಎಚ್ಚರಿಕೆಯ ಗಂಟೆಯಾಗಲಿ
ಒಟ್ಟಾರೆ ಶಾಲಾ ಮಕ್ಕಳ ಸಮಯ ಪ್ರಜ್ಞೆ, ಅದೇ ಶಾಲಾ ಶಿಕ್ಷಕಿಯ ಸ್ಪಂದನೆ, ಸಾರ್ವಜನಿಕರ ಹೋರಾಟ, ಕಲಬುರಗಿ ಪೊಲೀಸರ ನಿಷ್ಪಕ್ಷಪಾತ ತನಿಖೆ, ಸರಕಾರಿ ಅಭಿಯೋಜಕರ ಸಮರ್ಪಕ ವಾದ. ಈ ಎಲ್ಲದರ ಪರಿಣಾಮ ಮುಗ್ದ ಬಾಲಕಿಗೆ ನಿತ್ಯ ಕಿರುಕುಳ, ದೌರ್ಜನ್ಯ ನಡೆಸುತ್ತಿದ್ದ ಶಿಕ್ಷಕನ ವೇಷದಲ್ಲಿನ ಮೃಗ , ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಮಾಡಿದ್ದು ಶ್ಲಾಘನಾರ್ಹ. ಈ ತೀರ್ಪು ಇಂತಹ ಗೋಮುಖ ವ್ಯಾಘ್ರಗಳಿಗೆ ಎಚ್ಚರಿಕೆಯ ಗಂಟೆಯಾದರೆ ಸಾಕು !





