ಕಲಬುರಗಿ ಜು.28 :- ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೂಡಲೇ ಬರಗಾಲ ಘೋಷಣೆಗೆ ಆಗ್ರಹ ಹಾಗೂ (Demand for drought declaration) ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ ಮನವಿ ಮಾಡಿದ್ದಾರೆ.
ಮಳೆಯ ಅಭಾವದಿಂದಾಗಿ ರೈತ ಹಾಗೂ ಕೃಷಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬಿತ್ತನೆ ಮಾಡಲಾದ ಬೆಳೆಗಳು ಮಳೆ ಇಲ್ಲದೆ ಒಣಗುವ ಹಂತಕ್ಕೆ ತಲುಪಿದ್ದು ಕೃಷಿ ಚಟುವಟಿಕೆಗಳು ಸಂಪೂರ್ಣ ಹಿನ್ನಡೆ ಅನುಭವಿಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ತೀವ್ರ ಕೊರತೆಯುಂಟಾಗಿದೆ.
ಇದರಿಂದಾಗಿ ಸಾಕಾಣಿಕೆದಾರರು ಕಣ್ಣೀರಲ್ಲಿ ಕೈತೊಳೆಯುವಂತಾಗಿದ್ದು ಜನರು ಗೋಳೇ ಹೊರಟಿದ್ದಾರೆ. ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರೀಯಾಂಕ್ ಖರ್ಗೆ ಅವರು, ಮುತುವರ್ಜಿ ವಹಿಸಿ ರೈತರ ಕಷ್ಟವನ್ನು ಸರಕಾರದ ಮುಂದಿಟ್ಟು ನಿವಾರಣೆ ಮಾಡಬೇಕು ಎಂದು ಅನಿತಾ ವಳಕೇರಿ ಆಗ್ರಹಿಸಿದ್ದಾರೆ.
ವಿಶೇಷ ನೆರವಿಗೆ ಮನವಿ
ತೊಂದರೆಗೆ ಒಳಗಾದ ರೈತರಿಗೆ ಸೂಕ್ತ ಬೆಳೆ ಪರಿಹಾರ ಹಾಗೂ ಕೃಷಿ ಕಾರ್ಮಿಕರಿಗೆ ವಿಶೇಷ ಆರ್ಥಿಕ ನೆರವು ನೀಡಬೇಕು. ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಗೋಶಾಲೆ ಮತ್ತು ಮೇವು ಶೇಖರಣೆ (ಬ್ಯಾಂಕ್) ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು.
ಮುಂದಿನ ದಿನಗಳಲ್ಲಿ ಸಮರ್ಪಕ ಮಳೆಯಾಗದಿದ್ದಲ್ಲಿ, ಸರಕಾರ ವೈಜ್ಞಾನಿಕ ವಿಧಾನದ ಮೂಲಕ ತಕ್ಷಣವೇ ಮೋಡಬಿತ್ತನೆ ಕಾರ್ಯವನ್ನು ಆರಂಭಿಸಬೇಕು. ಅನ್ನದಾತನ ಸಂಕಷ್ಟ ನಿವಾರಣೆಗೆ ಸರಕಾರ ಯಾವುದೇ ವಿಳಂಬ ಧೋರಣೆ ಅನುಸರಿಸದೇ ತುರ್ತು ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅವರು ಪತ್ರಿಕೆ ಪ್ರಕಟಣೆ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.






