ಈ ಸ್ಥಳದಲ್ಲಿ ನಿಮ್ಮ ಜಾಹೀರಾತು ಪ್ರಕಟಿಸಲು ನಮ್ಮನ್ನು ಸಂಪರ್ಕಿಸಿ

ಕಾರಹುಣ್ಣಿಮೆಯಂದು ಕರಿ ಹರಿಯುವ ಪದ್ದತಿ ಅದೆಷ್ಟು ರೋಚಕ ಗೊತ್ತಾ ? ಕರಿ ಹರಿಯುವ ಮುನ್ನ ಹೆಂಡತಿಯ ತಾಳಿ ತೆಗೆಯೋದು ಏಕೆ ? ಇಲ್ಲಿದೆ ಕಾರಹುಣ್ಣಿಮೆ ವಿಶೇಷತೆ !!

June 29, 2026 3:25 PM
---Advertisement---
ಇದು ಉತ್ತರ ಕರ್ನಾಟಕ ಭಾಗದ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದು. ರೈತಾಪಿ ವರ್ಗದವರ ಪಾಲಿಗೆ ಅತ್ಯಂತ ಶ್ರೇಷ್ಠ ಹಬ್ಬ ಅಂದರೆ ಅದು ಕಾರಹುಣ್ಣಿಮೆ. ಎತ್ತುಗಳೊಂದಿಗೆ ಹೊಲ ಉಳುಮೆ ಮಾಡಿ ಬೆಳೆ ಬೆಳೆದು ಜಗತ್ತಿಗೆ ಅನ್ನಕೊಡುವ ಅನ್ನದಾತ, ನಿತ್ಯ ತನ್ನ ಜೊತೆಗೆ ದುಡಿಯುವ ಎತ್ತುಗಳನ್ನು ಆರಾಧಿಸುವ ಹಬ್ಬವೇ ಕಾರ ಹುಣ್ಣಿಮೆ.

ಈ ಕಾರಹುಣ್ಣಿಮೆ ಉತ್ತರ ಕರ್ನಾಟಕದ ಅತ್ಯಂತ ಶ್ರೇಷ್ಠ ಹಬ್ಬ.. ಕಾರ ಹುಣ್ಣಿಮೆಯ ದಿನ ರೈತರು ಬೆಳಿಗ್ಗೆಯೇ ಎತ್ತುಗಳನ್ನು ಹಳ್ಳದ ಬಳಿ ಕರೆದೊಯ್ದು ಎತ್ತುಗಳ ಮೈ ತೊಳೆಯುತ್ತಾರೆ. ಕೊಂಬುಗಳಿಗೆ ಬಣ್ಣ ಬಳಿದು ಅಲಂಕಾರ ಮಾಡುತ್ತಾರೆ. ಕೊರಳಿಗೆ ಗಂಟೆ, ಕಾಲಿಗೆ ಗೆಜ್ಜೆ , ಕಾಲುಗಡಗ ಕಟ್ಟಿ ಸಂಭ್ರಮಿಸುತ್ತಾರೆ. ಎತ್ತಿಗೆ ದೃಷ್ಟಿ ಆಗಬಾರದೆಂದು ಕುರಿಯ ಉಣ್ಣೆಯಿಂದ ಮಾಡಿದ ದಾರ ಮೈಗೆ ಕಟ್ಟುತ್ತಾರೆ. ಮೈ ತುಂಬಾ ತಮಗಿಷ್ಟದ ಬಣ್ಣ ಬಳಿದು, ಬಲೂನಗಳನ್ನು ಕಟ್ಟಿ ಸಂಭ್ರಮಿಸುತ್ತಾರೆ. ಒಟ್ಟಾರೆ ಎತ್ತುಗಳು ಕಂಗೊಳಿಸುವಂತೆ ಪ್ರತಿಯೊಬ್ಬ ರೈತರೂ ತಮ್ಮ ತಮ್ಮ ಎತ್ತುಗಳಿಗೆ ಶೃಂಗರಿಸಿ‌ ಶೃಂಗರಿಸಿ ಸಂಭ್ರಮಿಸುತ್ತಾರೆ.

ವಿಶೇಷ ಭೋಜನ

ರೈತರು ಕಾರ ಹುಣ್ಣಿಮೆಯ ದಿನ ಎತ್ತುಗಳಿಗೆ ಶೃಂಗರಿಸುವುದು ಅಷ್ಟೇ ಅಲ್ಲ, ಮನೆಯಲ್ಲಿ ವಿವಿಧ ಬಗೆಯ ಭಕ್ಷ ಭೋಜನಗಳನ್ನು ತಯಾರಿಸಿ ಎತ್ತುಗಳಿಗೆ ನೈವೇದ್ಯ ರೂಪದಲ್ಲಿ ನೀಡುತ್ತಾರೆ. ತಾವು ದೇವರಿಗೆ ನೈವೇದ್ಯ ಅರ್ಪಿಸುವ ಹೋಳಿಗೆ‌ ಸೇರಿದಂತೆ ಭಕ್ಷ ಭೋಜನ ಎತ್ತುಗಳಿಗೂ ಉಣಬಡಿಸುತ್ತಾರೆ. ಕಾರಹುಣ್ಣಿಮೆ ದಿನ, ಮೊದಲು ಎತ್ತುಗಳಿಗೆ ಭಕ್ಷ ಭೋಜ‌ನ ಉಣಬಡಿಸಿದ ನಂತರವೇ ತಾವು ಉಟ ಸವಿಯುತ್ತಾರೆ. ಇದು ತಮ್ಮ ಶ್ರಮಜೀವನದ ಅವಿಭಾಜ್ಯ ಅಂಗವಾಗಿರುವ ಎತ್ತುಗಳ ಬಗ್ಗೆ ರೈತರಿಗೆ ಇರುವ ಭಾಂದವ್ಯ, ಪ್ರೀತಿ, ಗೌರವಕ್ಕೆ ಜೀವಂತ ಸಾಕ್ಷಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಆಚರಣೆ ತಲಾ ತಲಾಂತರದಿಂದ ನಡೆದು ಬರುತ್ತಿದೆ ಎನ್ನುವುದು ಗಮನಾರ್ಹ.

ಎತ್ತುಗಳ ಓಟದ ಸ್ಪರ್ದೆ

ಕಾರ ಹುಣ್ಣಿಮೆಯ ದಿನ ರೈತರು ತಮ್ಮ ತಮ್ಮ ಎತ್ತುಗಳ ನಡುವೆ ಓಟದ ಸ್ಪರ್ದೆ ಏರ್ಪಡಿಸುತ್ತಾರೆ. ಕೆಲವೆಡೆ ಎತ್ತುಗಳನ್ನು ಬಂಡಿಗೆ ಕಟ್ಟಿ ಬಂಡಿ ಓಟದ ಸ್ಪರ್ದೆ ಏರ್ಪಡಿಸುತ್ತಾರೆ. ಎತ್ತುಗಳೂ ಸಹ ಜಿದ್ದಿಗೆ ಬಿದ್ದವರಂತೆ ಓಡಿ ಗೆದ್ದು ತಮ್ಮ ಮಾಲೀಕನಿಗೆ ಬಹುಮಾನ ತಂದು ಕೊಡಲು ಶ್ರಮಿಸುತ್ತವೆ. ಎತ್ತುಗಳ ಓಟದ ಸ್ಪರ್ದೆ, ಆಕರ್ಷಕ ಎತ್ತುಗಳ ಪ್ರದರ್ಶನ ಈ ದಿನ ಹಳ್ಳಿ ಹಳ್ಳಿಗಳಲ್ಲಿ ಬಲು ಜೋರಾಗಿ ನಡೆಯುತ್ತದೆ.

ಕರಿ ಆಚರಣೆ ಬಲು ರೋಮಾಂಚನಕಾರಿ

ಇದೇ ವೇಳೆ ಕಾರ ಹುಣ್ಣಿಮೆ ದಿನ ಉತ್ತರ ಕರ್ನಾಟಕ ಭಾಗದ ಹಲವು ಗ್ರಾಮಗಳಲ್ಲಿ ಮಾಡುವ “ಕರಿ” ಆಚರಣೆಯೇ ಬಲು ರೋಮಾಂಚನಕಾರಿ. ಊರ ಅಗಸೆಯ ದ್ವಾರದಲ್ಲಿ ತುಸು ಎತ್ತರದಲ್ಲಿ ಮಾವಿನ ತೊಳಲು, ಹೂವುಗಳ ಮಿಶ್ರಣದ ಹಗ್ಗ ಕಟ್ಟುತ್ತಾರೆ. ಇತ್ತ ಇನ್ನೊಂದು ನಿರ್ದಿಷ್ಟ ಸ್ಥಳದಿಂದ ಎತ್ತಿನ ಬಂಡಿಗಳಲ್ಲಿ ರೈತರು ಕುತಿರುತ್ತಾರೆ. ಎಲ್ಲಾ ಎತ್ತುಗಳು ಪೈಪೋಟಿಗೆ ಬಿದ್ದು ಓಡಿ ಕರಿ ಹಗ್ಗದ ಕಡ ಮುನ್ನುಗ್ಗುತ್ತವೆ. ಯಾವ ಎತ್ತಿನ ಬಂಡಿ ಮೊದಲು ಹೋಗುತ್ತದೆಯೋ ಆ ಬಂಡಿಯಲ್ಲಿನ ರೈತ ತನ್ನ ಕೈಯಲ್ಲಿನ ಕತ್ತಿಯಿಂದ ಹಗ್ಗ ಕತ್ತರಿಸುತ್ತಾನೆ. ಯಾರು ಮೊದಲು ಕತ್ತರಿಸುತ್ತಾರೆ ಅವರು ಗೆದ್ದಂತೆ. ಇದೇ ಸಂಪ್ರಯಾದವನ್ನು ಕರಿ ಹರಿಯುವುದು ಎನ್ನುತ್ತಾರೆ.

ಕರಿ ಕತ್ತರಿಸದಿದ್ದರೆ ತಲೆಯೇ ಕಟ್

ಹೌದು ! ಕರಿ ಹರಿಯುವ ವೇಳೆ ತಲವಾರದಿಂದ ಒಂದೇ ಹೊಡೆತಕ್ಕೆ ಕರಿ ಹಗ್ಗ ಕತ್ತರಿಸಲೇಬೆಕು. ಇಲ್ಲದಿದ್ದರೆ ಆತನ ತಲೆಯೇ ಕಟ್ ಮಾಡುತ್ತಿದ್ದರಂತೆ. ಈ ಥರದ ಭಯಾನಕ ಆಚರಣೆ ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಭಂಕೂರ ಗ್ರಾಮದಲ್ಲಿ ಈ ಹಿಂದೆ ಆಚರಿಸಲಾಗುತ್ತಿತ್ತು. ಕರಿ ಹರಿಯದಿದ್ದರೆ ಜೀವ ಹೋಗುವುದು ಗ್ಯಾರೆಂಟಿ ಎನ್ನುವ ಭಯದಿಂದ ಕರಿ ಹರಿಯುವವರು ತಲವಾರ ಕೈಯಲ್ಲಿ ಹಿಡಿದು ಎತ್ತಿನ ಬಂಡಿ ಹತ್ತುವ ಮುನ್ನ ಹೆಂಡತಿಯ ಕೊರಳಲ್ಲಿನ ತಾಳಿ ತಗೊಂಡು ಹೋಗುತ್ತಿದ್ದರಂತೆ. ಮರಳಿ ಬಂದರೆ ಮತ್ತೆ ತಾಳಿ ಹೆಂಡತಿಯ ಕೊರಳಿಗೆ ಹಾಕುತ್ತಿದ್ದರಂತೆ. ಇತ್ತಿಚಿನ ದಿನಗಳಲ್ಲಿ ಕರಿ ಹರಿಯುವ ಸಂಪ್ರದಾಯದಲ್ಲಿ ಈ ಭಯಾನಕತೆಯ ಅಂಶ ಕೈ ಬಿಡಲಾಗಿದೆ. ಆದರೆ ಸಾಂಕೇತಿಕವಾಗಿ ಅದೇ ರೀತಿ ಹಬ್ಬ ಆಚರಣೆ ಈಗಲೂ ಭಂಕೂರ ಗ್ರಾಮದಲ್ಲಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ತಲೆ ತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಈಗಲೂ ಕರಿ ಹರಿಯುವ ವ್ಯಕ್ತಿ ಎತ್ತಿನ ಬಂಡಿ ಹತ್ತುವ ಮುನ್ನ ಹೆಂಡತಿಯ ಕೊರಳಲ್ಲಿನ ತಾಳಿ ತೆಗೆದೇ ಬರುತ್ತಾನೆ. ತೀವ್ರ ಸಿದ್ದತೆಯೊಂದಿಗೆ ಹರಿತವಾದ ತಲವಾರದಿಂದ ಒಂದೇ ಬಾರಿಗೆ ಕರಿಯ ಹಗ್ಗ ಕತ್ತರಿಸುತ್ತಾನೆ. ಭಂಕೂರ ಗ್ರಾಮದಲ್ಲಿ ತಲೆ ತಲಾಂತರದಿಂದ ನಡೆದುಕೊಂಡು ಬರುತ್ತಿರುವ ಈ ಆಚರಣೆ ಇತರೇ ಗ್ರಾಮಗಳಿಗೆ ಹೋಲಿಸಿದರೆ ವಿಶೇಷತೆಯಿಂದ ಕೂಡಿದೆ.

ಕೃಷಿ ಚಟುವಟಿಕೆ ಚುರುಕು ವೇಳೆ ಹೊಸ ಹುರುಪು

ವಾಸ್ತವವಾಗಿ ಮುಂಗಾರು ಆರಂಭದಲ್ಲಿಯೇ ಕಾರಣ ಹುಣ್ಣಿಮೆ ಬರುವುದು. ಮುಂಗಾರು ಬಿರುಸಾದ ನಂತರ ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಸೇರಿ ಇತರೇ ಕೃಷಿ ಚಟುವಟಿಕೆಗಳನ್ನು ಬಿರುಸುಗೊಳಿಸುವ ಕಾಲ ಇದು. ಈ ರೀತಿ ನಿರಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮುನ್ನ ತಮ್ಮ ಹೆಗಲಿಗೆ ಹೆಗಲಾಗಿ ದುಡಿಯುವ ಎತ್ತುಗಳಿಗೆ ಆರಾಧಿಸುವ ರೈತನ ಸುಗುಣವೇ ಕಾರ ಹುಣ್ಣಿಮೆ. ಈ ಕಾರ ಹುಣ್ಣಿಮೆ ಇವತ್ತೂ ಸಹ ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಎತ್ತುಗಳನ್ನು ಬಸವಣ್ಣನ ಹೆಸರಿನಲ್ಲಿ ಆರಾಧಿಸುವುದೇ ಕಾರಹುಣ್ಣಿಮೆ. ಒಂದರ್ಥದಲ್ಲಿ ಇದು ಎತ್ತುಗಳ ಹಬ್ಬ… ಎಲ್ಲರಿಗೂ ಕಾರಹುಣ್ಣಿಮೆಯ ಹಾರ್ದಿಕ ಶುಭಾಷಯಗಳು..

WhatsApp

Join Now

Telegram

Join Now

Related Stories

Leave a Comment