ಕಲಬುರಗಿ ಜೂ.27: ಜುಲೈ 3 ರಿಂದ ಆಗಷ್ಟ 28 ರವರೆಗೆ ಜಮ್ಮು ಕಾಶ್ಮೀರದಲ್ಲಿನ ಹಿಂದೂಗಳ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಅಮರನಾಥ ಯಾತ್ರೆಗೆ ಅವಕಾಶ ಇರಲಿದೆ. ಈ ಬಾರಿ ಯಾತ್ರೆಗೆ ಕಲಬುರಗಿಯಿಂದ 645 ಯಾತ್ರಾರ್ಥಿಗಳು ತೆರಳುತ್ತಿದ್ದಾರೆ. ಇದು ರಾಜ್ಯದಲ್ಲಿಯೇ ಜಿಲ್ಲಾ ಕೇಂದ್ರಗಳಿಂದ ತೆರಳುತ್ತಿರುವ ಜನರ ಪೈಕಿ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಕಲಬುರಗಿ ಜಿಲ್ಲೆಯಿಂದಲೇ ಅತಿ ಹೆಚ್ಚು ಪ್ರಮಾಣದಲ್ಲಿ ಭಕ್ತರು ಅಮರನಾಥ ಯಾತ್ರೆಗೆ ತೆರಳುತ್ತಿರುವುದು.
ಕಿಟ್ ವಿತರಣೆ
ಅಮರನಾಥ ಯಾತ್ರೆಗೆ ನೋಂದಣಿ ಮಾಡಿಕೊಂಡ 645 ಭಕ್ತರಿಗೂ ಕಲಬುರಗಿಯಲ್ಲಿ ಉಚಿತ ಕಿಟ್ ವಿತರಿಸಲಾಯಿತು. ಅಮರನಾಥ ಯಾತ್ರಾ ಕಮಿಟಿ ವತಿಯಿಂದ ಎಲ್ಲರಿಗೂ ಯಾತ್ರೆಯ ಬಗ್ಗೆ ಸವಿವರ ಮಾಹಿತಿ ನೀಡಿದ್ದಲ್ಲದೇ ಯಾತ್ರೆಯ ವೇಳೆ ಅಗತ್ಯವಾಗುವ ವಸ್ತುಗಳನ್ನು ಒಳಗೊಂಡ ಕಿಟ್ ಗಳನ್ನು ವಿತರಿಸಲಾಯಿತು.
ಕಿಟ್ ನಲ್ಲಿ ಏನೇನಿದೆ ?
ಯಾತ್ರೆ ವೇಳೆ ಮಳೆಗೆ ಮೈ ಒದ್ದೆಯಾಗಬಾರದು ಅಂತ ರೇನ್ ಕೋಟ್, ಕಾನಟೋಪಿ, ಕಾನ್ಪಟ್ಟಿ, ಹ್ಯಾಂಡ್ ಗ್ಲೌಸ್, ಕೆಲವು ಸಾಮಾನ್ಯ ಔಷಧಿಗಳು, ಸಾಕ್ಸ್, ಸನ್ ಸ್ಕ್ರೀನ್ ಸೇರಿದಂತೆ ಅಲ್ಲಿ ಬಳಕೆಗೆ ಅಮೂಲ್ಯವಾದ ಹಾಗೂ ಅತಿ ಹೆಚ್ಚು ಜರೂರು ಎನಿಸುವ ವಸ್ತುಗಳನ್ನು ಈ ಕಿಟ್ ಒಳಗೊಂಡಿದೆ.
ಕಲಬುರಗಿ ಪೂರ್ವಭಾವಿ ಸಭೆ
ಅಮರನಾಥ ಯಾತ್ರೆಗೆ ತೆರಳುತ್ತಿರುವ ಎಲ್ಲಾ ಭಕ್ತರ ಪೂರ್ವ ಸಿದ್ದತಾ ಸಭೆ ಕಲಬುರಗಿ ನಗರದ ರಾಮತೀರ್ಥ ದೇವಸ್ಥಾನದಲ್ಲಿ ಜೂ.26 ರಂದು ನಡೆಯಿತು.
ಅಮರನಾಥ ಯಾತ್ರಾ ಸೇವಾ ಸಮಿತಿ ಏರ್ಪಡಿಸಿದ್ದ ಈ ಸಭೆಯಲ್ಲಿ ಸಮಿತಿ ಕಾರ್ಯದರ್ಶಿ ರವಿಚಂದ್ರ ತಾಂಡೂರ ಅವರು ಯಾತ್ರಾರ್ಥಿಗಳಿಗೆ ಯಾತ್ರೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಯತ್ರೆಯ ವೇಳೆ ಸಾಧ್ಯವಾದಷ್ಟು ಲಗೇಜ್ ಕಡಿಮೆ ಇರಲಿ. ಅಲ್ಲಿ ಒಮ್ಮಲೇ ಛಳಿ, ಮಳೆ, ಮರು ಕ್ಷಣವೇ ಬಿರು ಬಿಸಿಲು, ವಿಪರೀತ ಶಕೆಯಂತಹ ವಾತಾವರಣ ಇರುತ್ತದೆ. ಎಲ್ಲರೂ ಕಿವಿಯನ್ನು ಕವರ್ ಮಾಡುವ ರೀತಿಯಲ್ಲಿ ಕಾನ್ಟೋಪಿ ಧರಿಸಿ, ಕೈಗಳಿಗೆ ಬೆಚ್ಚನೆಯ ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿ ಧರಿಸಿ, ಟ್ರಕ್ಕಿಂಗ್ ಗೆ ಅನುಕೂಲಕರವಾದ ಶೂಗಳು ಧರಿಸಿ, ಮಳೆಯಾಗುತ್ತಿದ್ದರೆ ರೇನ್ ಕೋಟ್ ಬಳಸಿ. ಡ್ರೈ ಫುಡ್ ಜೊತೆಗಿರಲಿ. ನಿಮ್ಮ ದಿನಬಳಕೆಯ ಔಷಧಿಗಳ ಜೊತೆಗೆ ಮೈಕೈ ನೋವಿಗೆ, ಶೀತ, ಜ್ವರಕ್ಕೆ, ಆಸಿಡಿಟಿಗೆ, ಕೆಮ್ಮಿಗೆ ಈ ರೀತಿ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಒಂದಿಷ್ಟು ಔಷಧಿ ಜೊತೆಗಿರಲಿ ಎಂದು ಯಾತ್ರಾರ್ಥಿಗಳಿಗೆ ರವಿಚಂದ್ರ ತಾಂಡೂರ ಅವರು ಸಲಹೆ ನೀಡಿದರು.
ಅಮರನಾಥ ಯಾತ್ರೆ ಏಕೆ ಮಾಡಬೇಕು ? ಹೇಗೆ ಮಾಡಬೇಕು ? ಎನ್ನುವುದರಿಂದ ಹಿಡಿದು ಯಾತ್ರೆ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೆನು ? ಯಾತ್ರೆಯಲ್ಲಿ ಊಟ ತಿಂಡಿ ಹೇಗಿರಬೇಕು ? ಅಲ್ಲಿ ಏನು ನೋಡಬೇಕು ? ಬರುವಾಗ ಪ್ರಸಾದ ರಫದಲ್ಲಿ ಏನನ್ನು ತರಬೇಕು ಎನ್ನುವವರೆಗೆ ರಾಮಚಂದ್ರ ತಾಂಡೂರ ಅವರು ಎರಡುವರೆ ಗಂಟಗಳ ಕಾಲ ನಿರರ್ಗಳವಾಗಿ ಯಾತ್ರಿಕರಿಗೆ ಪರಿಪೂರ್ಣ ಮಾಹಿತಿ ಒದಗಿಸಿದರು.
ಕಿಂಚಿತ್ತೂ ಭಯ ಬೇಡ – ಮುಂಜಾಗ್ರತಾ ಕ್ರಮ ಇರಲಿ
ಅಮರನಾಥ ಯಾತ್ರೆ ಈಗ ಮೊದಲಿನಂತಿಲ್ಲ. ಇತ್ತಿಚಿನ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೇಂದ್ರ ಸರಕಾರ ಮತ್ತು ಜಮ್ಮು ಕಾಶ್ಮೀರ ಸರಕಾರ ಯಾತ್ರಿಕರ ಸುರಕ್ಷತೆಗೆ ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲಿನ ಪ್ರಾಕೃತಿಕ ವಾತಾವರಣ ಎದುರಿಸಿ ಮುನ್ನಡೆಯಲು ಅಗತ್ಯ ಸಿದ್ದತೆ ಮಾಡಿಕೊಂಡರೆ ಸಾಕು. ಅಲ್ಲಿ ವಸತಿ, ಊಟಕ್ಕಾಗಿ ಸಾಕಷ್ಟು ಧರ್ಮಶಾಲೆಗಳು ಅಂದರೆ ಲಂಗರ್ ಗಳಿವೆ. ನಮ್ಮ ಸಮಿತಿಯಿಂದಲೂ ಲಂಗರ್ ಇದೆ. ನಾವು ಕಳೆದ 20 ವರ್ಷಗಳಿಂದ ಪ್ರತಿ ವರ್ಷವೂ ಅಮರನಾಥ ಯಾತ್ರೆ ಕೈಗೊಂಡಿದ್ದೇವೆ. ಯಾತ್ರಾರ್ಥಿಗಳಿಗೆ ಏನಾದರೂ ಅಡಚಣೆಯಾದ್ರೆ ನಾವಿದ್ದೇವೆ. ನಮ್ಮನ್ನು ಸಂಪರ್ಕಿಸಿ ಧೈರ್ಯವಾಗಿ ಯಾತ್ರೆ ಮಾಡಿ ಎಂದು ಯಾತ್ರಾರ್ಥಿಗಳಿಗೆ ರವಿಚಂದ್ರ ತಾಂಡೂರ ಅವರು ಅಭಯಹಸ್ತ ನೀಡಿದರು.
ಕಾಲ್ನಡಿಗೆ ಸಾಧ್ಯವಾಗದವರಿಗೆ ಕುದುರೆ, ಡೋಲಿ ವ್ಯವಸ್ಥೆಗಳಿವೆ
ಅಮರನಾಥ ಯಾತ್ರೆಗೆ ಹೋಗಬೇಕಾದವರಿಗೆ 18 ರಿಂದ 30 ಕಿಲೋ ಮೀಟರ್ ವರೆಗೆ ಕಾಲ್ನಡಿಗೆ ಮಾಡಬೇಕಾಗುತ್ತದೆ. ಅಮರನಾಥ ಗುಹೆ ತಲುಪಿ ಹಿಮಚ್ಛಾದಿತ ಶಿವಲಿಂಗದ ಸಾಕ್ಷಾತ್ ದರ್ಶನ ಮಾಡಲು ಎರಡು ಮಾರ್ಗಗಳಿವೆ. ಒಂದು ಪಹಲ್ಗಾಮ್ ಮಾರ್ಗ ಇನ್ನೊಂದು ಬಾಲ್ಟಾಲ್ ಮಾರ್ಗ. ಪಹಲ್ಗಾಮ್ ಮಾರ್ಗ 36 ರಿಂದ 48 ಕಿಲೋ ಮೀಟರ್ ಸಾಗಬೇಕಾಗುತ್ತದೆ. ತುಸು ಅಂತರ ಹೆಚ್ಚೆನಿಸಿದರೂ ಪ್ರಕೃತಿ ಸಂದರ್ಯಗಳು ಆಸ್ವಾದಿಸುತ್ತಾ, ನಿಧಾನವಾಗಿ ಸಾಗಲು ಅನುಕೂಲಕರ ಮಾರ್ಗ ಇದು. ಇನ್ನು ಬಾಲ್ಟಾಲ್ ಮಾರ್ಗದ ಮೂಲಕ ತೆರಳಿದರೆ ಅಮರನಾಥ ಗುಹೆಯಲ್ಲಿನ ಶಿವಲಿಂಗ ದರ್ಶನಕ್ಕೆ ಇರೋದು ಕೇವಲ 14 ರಿಂದ 16 ಕಿಲೋ ಮೀಟರ್. ಆದರೆ ಈ ಮಾರ್ಗ ತುಸು ಏರುಗತಿಯ ಮಾರ್ಗ. ತುಸು ಆಯಾಸ ಎನಿಸಬಹುದು. ನಿಧಾನವಾಗಿ ತೆರಳುವವರಿಗೆ ಇದೂ ಸಹ ಉತ್ತಮ ಮಾರ್ಗವಾಗಿದೆ. ಆಯ್ಕೆ ನಿಮಗೆ ಬಿಟ್ಟಿದ್ದು ಎಂದು ರವಿಚಂದ್ರ ತಾಂಡೂರ ಅವರು ಯಾತ್ರಾರ್ಥಿಗಳಿಗೆ ಎರಡೂ ಮಾರ್ಗಗಳು ಹಾಗೂ ಸಾಧಕ ಬಾಧಕಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು.
ಪ್ರಿಪೇಯ್ಡ್ ಸಿಮ್ ವರ್ಕ್ ಆಗಲ್ಲ
ಜಮ್ಮು ಕಾಶ್ಮೀರಕ್ಕೆ ಹೋದ ನಂತರ ನಿಮ್ಮ ಪ್ರೀಪೇಯ್ಡ್ ಸಿಮ್ ಕಾರ್ಡಗಳು ವರ್ಕ ಆಗಲ್ಲ. ಪೋಸ್ಟ್ ಪೇಯ್ಡ್ ಸಿಮ್ ಮಾತ್ರ ವರ್ಕ್ ಆಗುತ್ತವೆ. ಅಗತ್ಯ ಇದ್ದವರು ಅಲ್ಲಿಯೇ ಹೊಸ ಸಿಮ್ ಕಾರ್ಡ ಸಹ ಖರಿದಿಸಬಹುದು. ಯಾತ್ರಾರ್ಥಿಗಳು ತಾವು ಬಳಸಿದ ಅಥವಾ ಬಳಸದ ರೇನ್ ಕೋಟ್ ಸೇರಿ ಉಪಯುಕ್ತ ವಸ್ತುಗಳನ್ನು ಮರಳಿ ಬರುವಾಗ ಅಲ್ಲಿಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಕೊಟ್ಟರೆ ಅವರಿಗೂ ಮತ್ತೆ ಉಪಯೋವಾಗುತ್ತದೆ ಎಂದ ಅವರು, ಮರಳಿ ಬರುವಾಗ ಅಥವಾ ಬಂದ ಮೇಲೆ ನಿಮ್ಮ ಸಿಮ್ ಕಾರ್ಡ ಮಾತ್ರ ಕೊಡಬೇಡಿ. ಹೊಸದಾಗಿ ಖರೀದಿಸಿದ ಸಿಮ್ ಅಗತ್ಯ ಇಲ್ಲದಿದ್ದರೆ ಅರ್ಜಿ ಕೊಟ್ಟು ನಂಬರ್ ಬಂದ್ ಮಾಡಿಸಿ. ಆದರೆ ಬೇರೆಯವರಿಗೆ ಕೊಡಲೇಬೇಡಿ. ಆ ಮೂಲಕ ದುರುಪಯೋಗದ ಸಾಧ್ಯತೆ ತಪ್ಪಿಸಿ ಎಂದು ವಿವರಿಸಿದರು.
ಲಂಗರ್ ( ಧರ್ಮಶಾಲೆ) ಗಳಲ್ಲಿ ಊಟ, ವಸತಿ, ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಒಳಗೊಂಡು ಅಗತ್ಯ ವ್ಯವಸ್ಥೆಗಳೆಲ್ಲಾ ಮಾಡಿರುತ್ತಾರೆ. ಚಿಕಿತ್ಸೆಗೆ ಆಸ್ಪತ್ರೆ, ದಾರಿಯಲ್ಲಿ ಆರೋಗ್ಯ ಸಮಸ್ಯೆಯಾದ್ರೆ ಆಂಬ್ಯೂಲೆನ್ಸ್ ಸೌಲಭ್ಯ, ರಕ್ಷಣೆಗಾಗಿ ಹೆಜ್ಜೆ ಹೆಜ್ಜೆಗೂ ನಮ್ಮ ಯೋಧರ ಬೆಂಗಾವಲು ಸೇರಿ ಎಲ್ಲಾ ರೀತಿಯ ವ್ಯವಸ್ಥೆ ಇರಲಿದೆ. ಯಾವುದೇ ಭಯ- ಆತಂಕ ಇಲ್ಲದೇ ಒಂದಿಷ್ಟು ಮುಂಜಾಗ್ರತಾ ಕ್ರಮಗಳು ಹಾಗೂ ಸಿದ್ದತೆಗಳೊಂದಿಗೆ ಅತ್ಯಂತ ಸುಗಮವಾಗಿ ಅಮರನಾಥ ಯಾತ್ರೆ ಪೂರ್ಣಗೊಳಿಸಬಹುದು ಎಂದು ಅಮರನಾಥ ಯಾತ್ರಾ ಸೇವಾ ಸಮಿತಿ ಕಾರ್ಯದರ್ಶಿ ರವಿಚಂದ್ರ ತಾಂಡೂರ ಭರವಸೆ ನೀಡಿದರು.
ಮುಂದಿನ ವರ್ಷ ಸಾವಿರ ಜನರ ಯಾತ್ರೆ ಗುರಿ
ಅಮರನಾಥ ಯಾತ್ರೆಗೆ ರಾಜಧಾನಿ ಹೊರತುಪಡಿಸಿ ಜಿಲ್ಲೆಯೊಂದರಿಂದ ತೆರಳುತ್ತಿರುವ ಯಾತ್ರಾರ್ಥಿಗಳ ಪೈಕಿ ನಮ್ಮ ಕಲಬುರಗಿ ಜಿಲ್ಲೆಯವರೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದೇವೆ. 645 ಜನ ಭಕ್ತರು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಕಿಟ್ ಪಡೆದುಕೊಂಡು ಯಾತ್ರೆಗೆ ಸಜ್ಜಾಗಿದ್ದಾರೆ. ಮುಂದಿನ ವರ್ಷ ಈ ಯಾತ್ರೆಗೆ ಕನಿಷ್ಟ ಸಾವಿರ ಜನ ಕಲಬುರಗಿ ಜಿಲ್ಲೆಯಿಂದ ತೆರಳುವ ಗುರಿ ಇದೆ. ಅದಕ್ಕಾಗಿ ನೀವೂ ಸೇವೆ ಸಲ್ಲಿಸಿ ಎಂದು ಕರೆ ನೀಡಿದರು.
ಯಾತ್ರಾರ್ಥಿಗಳು ನಿರಾಳ
ರವಿಚಂದ್ರ ತಾಂಡೂರೆ ಅವರ ಮಾತು ಕೇಳಿ ಹೊಸದಾಗಿ ಯಾತ್ರೆ ಕೈಗೊಂಡವರೂ ಸಹ ನಿರಾಳತೆ ವ್ಯಕ್ತಪಡಿಸಿದರು. ಹೊಸ ಹುಮ್ಮಸ್ಸಿನೊಂದಿಗೆ ಜೈ ಬೋಲೆನಾಥ ಎಂಬ ಘೋಷ ವಾಕ್ಯದೊಂದಿಗೆ ಯಾತ್ರೆ ಯಶಸ್ಸಿಗೊಳಿಸುವ ಸಂಕಲ್ಪದ ಜಯಘೋಷ ಪೂರ್ವ ಸಿದ್ದತಾ ಸಭೆಯಲ್ಲಿ ಮೇಳೈಸಿತು.
ಅಮರನಾಥ ಯಾತ್ರಿಕರೆಲ್ಲರಿಗೂ ನಮ್ಮ “ಧರ್ಮದ ದಾರಿ” ವತಿಯಿಂದ ಶುಭಕೋರೋಣ.. ಜೈ ಭೋಲೇನಾಥ್ !!
ಅಮರನಾಥ್ ಯಾತ್ರಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹೀಗಿರಲಿ
By Editor
June 27, 2026 9:20 AM
---Advertisement---





