ಜಾಹೀರಾತಿಗಾಗಿ ನಮ್ಮನ್ನು ಸಂಪರ್ಕಿಸಬಹುದು

ಭೀಮೆಯ ಒಡಲ ನೀರಿಂದ ಊರ ದೇವರಿಗೆ ಜಲಾಭಿಷೇಕ : ಅಫಜಪೂರದಲ್ಲಿ ಮಳೆಗಾಗಿ ವಿಶೇಷ ಪೂಜೆ- ಪ್ರಾರ್ಥನೆ

July 14, 2026 1:04 PM
---Advertisement---
ಕಲಬುರಗಿ (ಅಫಜಲಪುರ) ಜುಲೈ 14: ಮುಂಗಾರು ಮಳೆ ಕೈಕೊಟ್ಟ ಕಾರಣ ಕಲಬುರಗಿ ಜಿಲ್ಲೆಯ ಭೀಮಾ ನದಿ ಬಹುತೇಕ ಬತ್ತಿ ಹೋಗಿದೆ. ಬತ್ತಿದ ಭೀಮೆಯ ತಳದಲ್ಲಿನ ನೀರಿನಿಂದಲೇ ಊರ ದೇವರುಗಳಿಗೆ ಜಲಾಭೀಷೇಕ ಮಾಡುವ ಮೂಲಕ ಅಫಜಲಪೂರ ಪಟ್ಟಣದ ಜನ ಮಳೆಗಾಗಿ ಪ್ರಾರ್ಥಿಸಿದ್ದಾರೆ.

ಸಕಾಲದಲ್ಲಿ ಮುಂಗಾರು ಮಳೆ ಸುರಿಯದ ಕಾರಣ ಕಲಬುರಗಿ ಜಿಲ್ಲೆಯ ಜೀವನಾಡಿಯಾಗಿರುವ ಭೀಮಾ ನದಿಯು ಬಹುತೇಕ ಬತ್ತಿಹೋಗಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಬೆಳೆ ಒಣಗುತ್ತಿವೆ, ಬಿತ್ತನೆ ಕಾರ್ಯಗಳು ಕುಂಠಿತಗೊಂಡಿವೆ. ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು-ನೀರಿನ ಸಮಸ್ಯೆ ಎದುರಾಗುವ ಭೀತಿಯೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಫಜಲಪುರ ಪಟ್ಟಣದ ರೈತರು, ಗ್ರಾಮಸ್ಥರು ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ಭೀಮಾ ನದಿಯಲ್ಲಿ ಉಳಿದಿದ್ದ ಅಲ್ಪ ಪ್ರಮಾಣದ ಜಲವನ್ನು ಸಂಗ್ರಹಿಸಿ ಪಟ್ಟಣದ ಪ್ರಮುಖ ದೇವಾಲಯಗಳಿಗೆ ಕೊಂಡೊಯ್ದು ದೇವರಿಗೆ ಜಲಾಭಿಷೇಕ ನೆರವೇರಿಸಿದರು.

ಭಕ್ತಿಭಾವದಿಂದ ನಡೆದ ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ದೇವತೆಗಳಿಗೆ ಅಭಿಷೇಕ, ವಿಶೇಷ ಪೂಜೆ, ಅರ್ಚನೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಬಳಿಕ ಮೇಘರಾಜನ ಕೃಪೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ರಾಜ್ಯದಾದ್ಯಂತ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು, ನದಿಗಳು ಹಾಗೂ ಜಲಾಶಯಗಳು ತುಂಬಿ ಹರಿಯಲಿ, ರೈತರ ಹೊಲಗಳಲ್ಲಿ ಸಮೃದ್ಧ ಬೆಳೆ ಬೆಳೆಯಲಿ ಹಾಗೂ ಜನಜೀವನ ಸುಧಾರಿಸಲಿ ಎಂದು ಭಕ್ತರು ದೇವರಲ್ಲಿ ಬೇಡಿಕೊಂಡರು.

ರೈತರು ಮಾತನಾಡಿ, “ಈ ಬಾರಿ ಮುಂಗಾರು ವಿಳಂಬವಾಗಿರುವುದರಿಂದ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಹಿನ್ನಡೆಯಾಗಿವೆ. ಬಿತ್ತನೆ ಮಾಡಿದ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಸಮರ್ಪಕ ಮಳೆಯಾಗದಿದ್ದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಪ್ರಕೃತಿಯ ಕೃಪೆಯ ಜೊತೆಗೆ ಸರ್ಕಾರವೂ ರೈತರ ಹಿತಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

ಪೂಜೆಯಲ್ಲಿ ಪಾಲ್ಗೊಂಡಿದ್ದ ಹಿರಿಯರು, ಮಹಿಳೆಯರು ಮತ್ತು ಯುವಕರು ಉತ್ತಮ ಮಳೆಯಾಗಲೆಂದು ಭಜನೆ ಹಾಗೂ ಪ್ರಾರ್ಥನೆ ನಡೆಸಿದರು. ಭೀಮಾ ನದಿಯ ಉಳಿದ ನೀರಿನಿಂದ ದೇವರಿಗೆ ಅಭಿಷೇಕ ಮಾಡುವ ಮೂಲಕ ಪ್ರಕೃತಿಯ ಮಹತ್ವವನ್ನು ಸಾರಿದ ರೈತರು, ನೀರಿನ ಸಂರಕ್ಷಣೆ ಮತ್ತು ಮಳೆನೀರಿನ ಸದ್ಬಳಕೆಯ ಅಗತ್ಯತೆಯ ಬಗ್ಗೆಯೂ ಜಾಗೃತಿ ಮೂಡಿಸಿದರು.

ಈ ಅಪರೂಪದ ಧಾರ್ಮಿಕ ಕಾರ್ಯಕ್ರಮವು ಪಟ್ಟಣದಲ್ಲಿ ಭಕ್ತಿ ಮತ್ತು ರೈತರ ನೋವನ್ನು ಒಂದೇ ವೇದಿಕೆಯಲ್ಲಿ ಪ್ರತಿಬಿಂಬಿಸಿತು. ಪ್ರಕೃತಿಯ ಅನುಕೂಲಕ್ಕಾಗಿ ಹಾಗೂ ರೈತರ ಬದುಕು ಹಸನಾಗಲೆಂಬ ಆಶಯದಿಂದ ನಡೆದ ಈ ವಿಶೇಷ ಪ್ರಾರ್ಥನೆ ಸ್ಥಳೀಯರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಅನೇಕ ರೈತರು, ಗ್ರಾಮಸ್ಥರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.

WhatsApp

Join Now

Telegram

Join Now

Leave a Comment