ಕಲ್ಬುರ್ಗಿ ಜ. 18: ಕಲ್ಬುರ್ಗಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿದೆ. ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟ ಕಾರಣ ಜನ ಹಾಗೂ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಮಳೆಗಾಗಿ ಜನ ನಾನಾ ಕಸರತ್ತು, ವಿಶೇಷ ಪೂಜೆ ಪುನಸ್ಕಾರಗಳು, ವಿವಿಧ ಆಚರಣೆಗಳ ಮೊರೆ ಹೋಗುತ್ತಿದ್ದಾರೆ. ಇದಕ್ಕೊಂದು ಜೀವಂತ ಸಾಕ್ಷಿ ಈ ಕಪ್ಪೆಗಳ ಮದುವೆ.
ಹೌದು !! ಕಪ್ಪೆಗಳನ್ನ ಹಿಡಿದು ತಂದು ಮದುವೆ ಮಾಡಿದರೆ, ಮಳೆ ಸುರಿಯುತ್ತದೆ ಎನ್ನುವ ನಂಬಿಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹಳ ಹಿಂದಿನಿಂದಲೂ ಇದೆ. ಈ ಬಾರಿಯೂ ಮಳೆ ಕೈಕೊಟ್ಟ ಕಾರಣ, ಜನ ಕಪ್ಪೆಗಳ ಮದುವೆಯ ಮೊರೆ ಹೋಗಿದ್ದಾರೆ.
ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಕಪ್ಪೆಗಳ ಮದುವೆ ಬಹಳ ಸಂಭ್ರಮದಿಂದ ನಡೆಯಿತು. ಎರಡು ಜೋಡು ಕಪ್ಪೆಗಳನ್ನ ಹಿಡಿದು ತಂದು, ಅವುಗಳಿಗೆ ಸರಳವಾಗಿ, ಶಾಸ್ತ್ರದಂತೆ ಮದುವೆ ಮಾಡಿಸಲಾಯಿತು. ಹೆಂಗಳೆಯರು ಎಣ್ಣೆ ಹಚ್ಚುವ ಪದಗಳು ಸೇರಿದಂತೆ ಶಾಸ್ತ್ರ ಬದ್ಧವಾಗಿ ಹಲವು ಹಾಡುಗಳನ್ನು ಹೇಳುವ ಮೂಲಕ ಕಪ್ಪೆಗಳ ಮದುವೆಗೆ ಕಳೆ ತಂದರು.
ಕಪ್ಪೆಗಳ ಮದುವೆ ಮುಗಿಸಿ ಮನೆಗೆ ತೆರಳುವವರು, ಮಳೆಯಲ್ಲಿ ತೊಯ್ದು ಹೋಗುವಂತಾಗಲಿ ಎಂದು ಕಪ್ಪೆಗಳ ಮದುವೆಯಲ್ಲಿ ಭಾಗವಹಿಸಿದ್ದ ಜನ ಪ್ರಾರ್ಥಿಸಿದರು.
ಗ್ರಾಮದ ಮಕ್ಕಳಂತೂ ಕಪ್ಪೆಗಳ ಮದುವೆ, ಹಾಡು, ಸಂಭ್ರಮ, ಕಂಡು ಕುಣಿದು ಕುಪ್ಪಳಿಸಿದರು.
ಇನ್ನೊಂದೆಡೆ ಬರಗಾಲ ಘೋಷಣೆಗೆ ಆಗ್ರಹಿಸಿ ಜೇವರ್ಗಿ ಪಟ್ಟಣದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಜೇವರ್ಗಿಯಲ್ಲಿಂದು ಬೃಹತ್ ಪ್ರತಿಭಟನೆ ನಡೆಯಿತು. ಪಟ್ಟಣದ ರಿಲಯನ್ಸ್ ಬಂಕ್ನಿಂದ ಬಸವೇಶ್ವರ ವೃತ್ತದವರಗೆ ಎತ್ತಿನ ಬಂಡಿಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಯಿತು. ಬಳಿಕ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನ ಸಭೆ ನಡೆಸಲಾಯಿತು. ಜೇವರ್ಗಿ ಶಹಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಸಹ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ದರು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಆಲಮಟ್ಟಿ ಜಲಾಶಯದದಿಂದ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಕ್ಯಾನಲ್ಗಳಿಗೆ ನೀರು ಹರಿಸಬೇಕು. 2 ನೇ ಕಂತಿನ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ಇಡೀ ಜಿಲ್ಲೆಯನ್ನ ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿ ಸಂಭ್ರಮಿಸಿದ ಜನ : ಕಪ್ಪೆಗಳ ಮದುವೆ ಮಾಡಿಸಿದರೆ ಮಳೆ ಬರುತ್ತಾ ?
By Editor
July 18, 2026 2:20 PM
---Advertisement---





